08/08/2026
ಶಾರದ ಬಾಗಿಲ ಬಳಿ ನಿಂತು ಗಂಡ ವಿಶ್ವನಾಥ್ ದಾರಿ
ಕಾಯುತ್ತಿದ್ದಳು. ಪ್ರತಿ ನಿಮಿಷ ಗಡಿಯಾರದ ಕಡೆ ನೋಡುತ್ತಿದ್ದಳು, ರೂಮಿಗೆ ಹೋಗಿ ಪ್ಯಾಕ್ ಮಾಡಿರುವ ಬಟ್ಟೆ ಬರೆ ಸರಿ ಇದೆಯೇ ಎಂದು ನೋಡಿಕೊಂಡು ಬಂದಳು.
"ಖುಷಿ , ಹಿತ ಎಲ್ಲೂ ಹೋಗಬೇಡಿ ಮಕ್ಕಳ, ಮೊದಲೇ ಟ್ರೈನಿಗೆ ಟೈಮ್ ಆಗಿದೆ ... ಎಲ್ಲಿ ಹೋದರು ನಿಮ್ಮ ಅಪ್ಪ !?ಇಷ್ಟು ಹೊತ್ತಾಗಿ ಬರಲಿಲ್ಲ " ಆತಂಕದಿಂದ ಮಕ್ಕಳಿಗೆ ಹೇಳಿದಳು. ಅಷ್ಟರಲ್ಲಿ ಮನೆಯ ಮುಂದೆ ಕಾರ್ ಬಂದು ನಿಂತ ಶಬ್ದ ಕೇಳಿ ಹೊರಗೆ ಬಂದಳು.
ತನ್ನ ಗೆಳೆಯನ ಕಾರ್ ನಲ್ಲಿ ಬಂದು ಇಳಿದ ವಿಶ್ವನಾಥ. "ಟೈಮ್ ಆಗುತ್ತಾ ಇದೆ ವಿಶ್ವ , ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಎಲ್ಲಿ ಹೋಗಿದ್ದೆ!? " ಎಂದು ಗಂಡನನ್ನು ಕೇಳಿದಳು.
"ಮಕ್ಕಳಿಗೆ ಸರ್ಪ್ರೈಸ್ ಇದೆ " ಎಂದು ಹೇಳಿ ಕೈನಲ್ಲಿ ಇದ್ದ ಬರ್ತಡೇ ಕೇಕ್ ನ ಪ್ಯಾಕೆಟ್ ಅನ್ನು ತೋರಿಸಿದ.
"ಸರಿ ಸರಿ ನಡೆಯಿರಿ "ಎಂದು ಮನೆಯ ಬೀಗ ಹಾಕಿ ಕಿಟ್ ಗಳನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟು ಮಕ್ಕಳನ್ನು ಹತ್ತಿಸಿ ರೈಲ್ವೆ ಸ್ಟೇಷನ್ ಕಡೆಗೆ ಹೊರಟರು.
ಸ್ಟೇಷನ್ ತಲುಪಿದ ಕೂಡಲೇ ಕನ್ಯಾಕುಮಾರಿಗೆ ಹೊರಡುವ ರೈಲು ಹತ್ತಿ ಕುಳಿತರು. ಖುಷಿ ಮತ್ತು ಹಿತ ಹತ್ತಿದ ಕೂಡಲೇ ಸಂತೋಷದಿಂದ ಚಪ್ಪಾಳೆ ತಟ್ಟಿ ಕುಣಿದಾಡಿದರು " ಏ...ಟ್ರೈನ್ ಟ್ರೈನ್ " . ಐದು ವರ್ಷದ ಎರಡು ಪುಟ್ಟ ಗೊಂಬೆಗಳ ಹಾಗೆ ಕಾಣುತ್ತಾ ಇದ್ದ ಆ ಮಕ್ಕಳನ್ನು ಭೋಗಿಯಲ್ಲಿ ಇದ್ದ ಜನ ನೋಡುತ್ತ ಇದ್ದರು. ಮಕ್ಕಳ ಈ ಸಂತೋಷಕ್ಕೆ ಕಾರಣವಿಲ್ಲದೆ ಇರಲಿಲ್ಲ... ಅವರು ಇದೇ ಮೊದಲು ರೈಲು ಹತ್ತಿದ್ದು.
ಕಾಲೇಜು ಒಂದರಲ್ಲಿ ಪ್ರಾಧ್ಯಾಪಕ ಆಗಿದ್ದ ವಿಶ್ವನಾಥ್ ರಜದ ಸಮಯದಲ್ಲಿ ಟ್ಯೂಷನ್ ಮಾಡುತ್ತಿದ್ದರಿಂದ ಅವನಿಗೆ ಬಿಡುವು ಸಿಗುವುದು ವಿರಳ ಆಗಿತ್ತು , ಹಾಗಾಗಿ ಇದೇ ಮೊದಲ ಬಾರಿಗೆ ಮಕ್ಕಳನ್ನು ಕರೆದುಕೊಂಡು ದೂರದ ಪ್ರವಾಸಕ್ಕೆ ಹೊರಟಿದ್ದ.
"ಚಾಯ್ ,ಕಾಫಿ ,ಬಿಸ್ಕೆಟ್" ಎಂದು ಕೂಗುತ್ತಾ ಮಾರಲು ಹುಡುಗನೊಬ್ಬ ಬಂದ. ಅದನ್ನು ನೋಡಿದ ಹಿತ ತಾಯಿಯನ್ನು ಕೇಳಿದಳು "ಅಮ್ಮ ,ನನಗೆ ಬಿಸ್ಕೇಟು" ತುಂಬಾ ಮೆಲು ದನಿಯಲ್ಲಿ ಅದು ಶಾರದಾಗೆ ಕೇಳಿಸಿತೋ ಇಲ್ಲವೋ ..
ಅಷ್ಟರಲ್ಲಿ ಖುಷಿ "ಅಣ್ಣ ಬಿಸ್ಕೆಟ್ ಕೊಡು " ಎಂದು ಜೋರಾಗಿ ಕೂಗಿ ಬಿಸ್ಕೆಟ್ ಪ್ಯಾಕೆಟ್ ತಾನೇ ತೆಗೆದುಕೊಂಡುಬಿಟ್ಟಳು.
"ತಗೊಳೆ ಹಿತ " ಎಂದು ಅದನ್ನು ಅವಳಿಗೆ ಕೊಟ್ಟಳು.
" ಥಾಂಕ್ಸ್ ಅಕ್ಕ " ಎಂದು ಅದನ್ನು ತಿನ್ನಲು ತೊಡಗಿದಳು ಹಿತ. ಕೇವಲ ಹಿತಾಗಿಂತ 10 ನಿಮಿಷ ಮೊದಲು ಹುಟ್ಟಿದ್ದಕ್ಕೆ ಖುಷಿ ಅಕ್ಕನಾದಳು.
ಟ್ರೈನ್ ಹೊರಟಿತು ಕನ್ಯಾಕುಮಾರಿ ಕಡೆಗೆ. ಇವರ ಎದುರಿನ ಸೀಟ್ ನಲ್ಲಿ ಕುಳಿತಿದ್ದ ಸುಷ್ಮಾ ಮಕ್ಕಳನ್ನು ನೋಡಿ ನಕ್ಕು
" ಇಬ್ಬರು ಮಕ್ಕಳು ಒಂದೇ ರೀತಿ ಇದ್ದಾರೆ, ನೀವು ಅದು ಹೇಗೆ ಗುರುತು ಹಿಡಿಯುತ್ತೀರಾ !? " ಎಂದು ಶಾರದಾಳನ್ನು ಕೇಳಿದಳು .
" ನಮಗೆ ಅದು ತಿಳಿಯುತ್ತದೆ.. ಇವಳೇ ಖುಷಿ ಇವಳೇ ಹಿತ ಎಂದು ಹೊಸದಾಗಿ ನೋಡುವವರಿಗೆ ಗೊತ್ತಾಗುವುದಿಲ್ಲ... ಆದರೆ ಒಂದು ಕಾಸಗಲದ ಮಚ್ಚೆ ಹಿತ ಎಡಗೈಲಿ ಇದೆ " ಎಂದು ಹೇಳಿ ಆಕೆಗೆ ಹಿತಾಳ ಕೈಯಲ್ಲಿದ್ದ ಮಚ್ಚೆ ತೋರಿಸಿದಳು.
ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತ ಇದ್ದ
ಖುಷಿ " ನಾನು ಖುಷಿ ಅವಳು ನನ್ನ ತಂಗಿ ಹಿತ " ಎಂದು ಹೇಳಿದಳು.
"ಅಬ್ಬಬ್ಬಾ.. ಖುಷಿ ಹೆಸರಿಗೆ ತಕ್ಕ ಹಾಗೆ ಇದ್ದೀಯ ಕಂದ " ಎಂದು ಹೇಳಿ ಖುಷಿಯ ಕೆನ್ನೆಗೆ ಮುತ್ತು ಕೊಟ್ಟಳು.
ಬೆಂಗಳೂರಿನಿಂದ ಹೊರಟ ರೈಲು ಸುಮಾರು ಮೂರು ಘಂಟೆಗಳ ಕಾಲ ಚಲಿಸಿ ಸಂಜೆಯ ವೇಳೆಗೆ ಸೇಲಂ ಜಂಕ್ಷನ್ ತಲುಪಿತು. ರೈಲು ಅಲ್ಲಿ ಸುಮಾರು ಹೊತ್ತು ನಿಲ್ಲುತ್ತದೆ ಎಂದು ತಿಳಿದು ವಿಶ್ವನಾಥ್ ತನ್ನ ಬ್ಯಾಗ್ ನಲ್ಲಿ ಇದ್ದ ಬರ್ತಡೇ
ಕೇಕ್ ಅನ್ನು ತೆಗೆದು ಸೀಟಿನ ಮೇಲೆ ಇಟ್ಟ.
ಇಬ್ಬರು ಮಕ್ಕಳ ಕೈಯಲ್ಲೂ ಒಂದೇ ಬಾರಿಗೆ ಕೇಕ್ ಕಟ್ ಮಾಡಿಸಿ "ಹ್ಯಾಪಿ ಬರ್ತ್ಡೇ ಟು ಯು.." ಎಂದು ಎಲ್ಲರೂ ಹಾಡಿ ಮಕ್ಕಳಿಗೆ ಹರಸಿದರು . ಭೋಗಿಯಲ್ಲಿ ಇದ್ದ ಪ್ರತಿಯೊಬ್ಬರಿಗೂ ಕೇಕ್ ಕೊಟ್ಟು ಬಂದರು ಖುಷಿ ಮತ್ತು ಹಿತ....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...
'ಸೂಪರ್ ಸಾಹಿತಿ ಅವಾರ್ಡ್ಸ್ 6' ಸ್ಪರ್ಧೆಯ ಪ್ರತಿಭಾವಂತ ಉದಯೋನ್ಮುಖ ಲೇಖಕರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ ಕೃತಿ. ಜಡ್ಜ್ ಮೆಂಟ್ ( ಪ್...